Monday, August 10, 2009

ಶಬ್ದ ಮಾರಿ.. ದಾರಿ ಕೇರಿ...!!

ನಾವು ಕನ್ನಡಿಗರು. ವಿಶಾಲ ಹೃದಯದವರು. ಎಲ್ಲೆಡೆ ಸಹಬಾಳ್ವೆ, ಶಾಂತಿ ಪಾಠ ಬೋಧಿಸುವವರು. ಹೀಗೆ ಅನೇಕ ಬಿರುದು ಬಾವಲಿಗಳನ್ನು ಹೇಳ್ಕೊಳ್ತೇವೆ. ಇದರ ದ್ಯೋತಕವಾಗಿ ಆಗಸ್ಟ್ ಒಂಭತ್ತನೇ ತಾರೀಕಿಗೆ ಬೆಂಗಳೂರಿನ ಹಲಸೂರಿನಲ್ಲಿ ತಮಿಳು ಕವಿ ತಿರುವುಳ್ಳವರ್ ಪ್ರತಿಮೆ ಅನಾವರಣಕ್ಕೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ (ಎಲ್ಲಿದೆ ಕರುಣೆ ಅಂತ ಕೇಳಬೇಡಿ!) ಅವರಿಗೆ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವಕಾಶ ಮಾಡಿಕೊಟ್ರು.
* ಚಿತ್ರ ಕೃಪೆ: ಅಂತರ್ಜಾಲ

ಕಾಕತಾಳಿಯವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ವಚ್ಚತಾ ವಾಹಿನಿ, ಅಂದ್ರೆ ಕಾರ್ಪೋರೇಶನ್ ಗಾಡಿಯ ಹಿಂದೆ ಕಾಣಿಸಿದ ಒಂದು ಉಕ್ತಿ ಇಲ್ಲಿದೆ. ಅದೂ ಆಗಸ್ಟ್ ೯ಕ್ಕೆ..! ''ಶಬ್ದ ಮಾರಿ ದಾರಿ ಕೇರಿ''. ಇದು ಉಭಯ ಭಾಷಿಕರ ನಡುವಿನ ಹೊಸ (ರಾಜಕಾರಣಿಗಳ ಪ್ರಕಾರ) ಸಂಬಂಧದ ಪ್ರತಿಫಲವೇ, ಅಥವಾ ಮಾಲಿನ್ಯ ನಗರಿಯಾಗಿರುವ ಬೆಂಗಳೂರಿನಲ್ಲಿ ಮುಂದೊಂದು ದಿನ ಶಬ್ದವನ್ನೂ ಮಾರಿ ಜೀವನ ಸಾಗಿಸಬಹುದು ಎಂಬ ಸಂಶೋಧನೆಯೇ...? ತಿಳಿದಿಲ್ಲ..!!
ಅದೇನು ಬೇಕಾದ್ರೂ ಆಗಿರಲಿ.. ತಮಿಳು ಕನ್ನಡ ನಡುವಿನ ಹೊಸ ಬಾಂಧವ್ಯದ ಮುನ್ನುಡಿ ಎಂದು ಬೀಗುವ ಸರ್ಕಾರ ಇಂತಹ ಉಕ್ತಿಗಳತ್ತ ನೋಡಬೇಕು ಎನ್ನುತ್ತಿದ್ದಾರೆ ನಮ್ಮ ಆಟೋಕ್ತಿ ರಾಜರು...! ನನ್ಡ್ರಿ.. ವಣಕ್ಕಂ...!! ಅಲ್ಲಲ್ಲ.. ಧನ್ಯವಾದಗಳು, ನಮಸ್ಕಾರ..!!

Saturday, August 1, 2009

ನಂಬಿಕೆಯ ಪಾಲಕ...!

ಚಿತ್ರ ಕೃಪೆ : ಸಿ ಎನ್ ಮಹೇಶ್.

ಕೇಶವಣ್ಣ..! ನಿನಗೊಂದು ಸಲಾಂ...! ''ನೆನಪಿರಲಿ ನಾನಿಮ್ಮ ಆಟೋ ಚಾಲಕ, ನಿಮ್ಮ ಪ್ರೀತಿ ಸ್ನೇಹದ ನಂಬಿಕೆಯ ಪಾಲಕ, ನಿಮ್ಮ ಶುಭ ಪ್ರಯಾಣದ ಜೊತೆಯ ನಾವಿಕ, ಕನ್ನಡ ನಾಡು ನುಡಿಯ ಪ್ರಾಮಾಣಿಕ ಸೈನಿಕ''. ನಿನ್ನ ಈ ಉಕ್ತಿಯನ್ನು ಎಲ್ಲ ಆಟೋ ಚಾಲಕರೂ ಪಾಲಿಸುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವ...?!